Thursday, February 2, 2012

Haaruva Navilugalu


ಹಾರುವ ನವಿಲುಗಳು
ನೃತ್ಯದಲ್ಲಿ ನವಿಲುಗಳು ಏಕಸ್ವಾಮ್ಯ ಸಾಧಿಸಿಬಿಟ್ಟಿದ್ದವು. ಆ ದೇಶದ ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿಗಳೆಂದರೆ ನವಿಲುಗಳು ಮಾತ್ರವೇ ಎಂಬಂತಾಗಿಹೋಗಿತ್ತು. ಈ ದಬ್ಬಾಳಿಕೆಯನ್ನು ಸಹಿಸಲಾರದೆ ಕೆಂಬೂತಗಳು ದಂಗೆಯೆದ್ದವು. ತಮ್ಮನ್ನು ಹೀಗೆಯೇ ಕಡೆಗಣಿಸಿದರೆ, ತಾವೆಲ್ಲ ಎದ್ಧೋದನ ಧರ್ಮಕ್ಕೆ ಸಾಮೂಹಿಕವಾಗಿ ಗುಳೆ ಹೋಗುವುದಾಗಿ ಬೆದರಿಸಿದವು.


(ಕಪಿಲವಸ್ತುವಿನ ದೊರೆ ಶುದ್ಧೋದನ ಅವನ ಮಗ ರಾತ್ರೋರಾತ್ರಿ ಎದ್ಹೋದನ 
ಎಂಬ ಪದ್ಯಕ್ಕೂ ಈ ಕಥೆಗೂ ಯಾವುದೇ ಸಂಬಂಧವಿಲ್ಲ. - ಲೇ)


ಮೃಗೀಯ ಸರ್ಕಾರ ಈ ಬೆದರಿಕೆಗೆ ನಡುಗಿ ಹೋಯಿತು. ಒಡನೆಯೇ ಫರ್ಮಾನು ಹೊರಡಿಸಿ ಕೆಂಬೂತಗಳಿಗೆ ಮೀಸಲು ನಿಗದಿ ಪಡಿಸಿತು. ಸರ್ಕಾರದ ಯಾವುದೇ ಕಾರ್ಯಕ್ರಮಗಳಲ್ಲಿ ನವಿಲುಗಳಿಗೆ ಆದ್ಯತೆ ನೀಡತಕ್ಕದ್ದಲ್ಲವೆಂದೂ, ಕೆಂಬೂತಗಳ ಕುಣಿತವನ್ನು ಕಡ್ಡಾಯವಾಗಿ ಏರ್ಪಡಿಸಬೇಕೆಂದೂ ಅಧಿಕೃತವಾಗಿಯೇ ಘೋಷಿಸಲಾಯಿತು. ಮತ್ತು ಕೆಂಬೂತಗಳಿಗೆ ಉಚಿತವಾಗಿ ಯಥೇಷ್ಟ ಕಾಳು ಕಡಿ ನೀಡುವ ಯೋಜನೆಯೂ ಜಾರಿಯಾಯಿತು. 


ಹಸಿದ ನವಿಲುಗಳು ದಾರಿ ಕಾಣದೆ ಖಾಸಗಿ ಕಾರ್ಯಕ್ರಮಗಳ ಮೊರೆಹೋದವು. ಸರ್ಕಾರೀ ಸವಲತ್ತುಗಳಷ್ಟು ಪುಷ್ಕಳವಾಗಿ ಲಭ್ಯವಾಗದಿದ್ದರೂ ನವಿಲುಗಳ ಜೀವನೋಪಾಯಕ್ಕೇನೂ ತೊಂದರೆಯಾಗಲಿಲ್ಲ. ಹಾಳು ನವಿಲುಗಳು ಹೀಗೂ ಬದುಕುವುದನ್ನು ಸೈರಿಸಲಾಗದ  ಕೆಂಬೂತಗಳು ತಮ್ಮದೇ ಬಾಸೆಯ ಕೆಂಬೂತ ಸಾಯಿತಿಯೊಂದನ್ನು ಮುಂದಿಟ್ಟುಕೊಂಡು, ಖಾಸಗೀ ರಂಗದಲ್ಲೂ ಕೆಂಬೂತಗಳಿಗೇ ಮೀಸಲು ಬೇಕೆಂದು ಹೋರಾಡತೊಡಗಿದವು. ಈ ವರಾತ ತಾಳಲಾರದೆ ಎಷ್ಟೋ ಖಾಸಗಿ ರಂಗಗಳೇ ಮುಚ್ಚಿಹೋದವು. ಇಂಥ ಹೊತ್ತಿನಲ್ಲಿ ಪ್ರೊಫೆಸರ್ ಶಾಸ್ತ್ರಿ ಮುಂತಾದ ವಿಕಾರವಾದಿ ಸುದ್ದಿಜೀವಿ ನವಿಲುಗಳು, ಕೆಂಬೂತಗಳನ್ನು ಬೆಂಬಲಿಸುವಂತೆ ನಟಿಸಿ, ತಮ್ಮ ಜೀವನವನ್ನು ಸುಖವಾಗಿ ಸಾಗಿಸಿಕೊಂಡವು ! ಮತ್ತು ಪ್ರಶಸ್ತಿಗಳನ್ನೂ ಗಿಟ್ಟಿಸಿಕೊಂಡವು ! 


ಆದರೆ, ಎಷ್ಟೇ ಡಂಗೂರ ಹೊಡೆದರೂ, ಕೆಂಬೂತಗಳ ಕುಣಿತವನ್ನೇ  ದೇಶೀ ಪರಂಪರೆ ಎಂದು ಬಿಂಬಿಸಿದರೂ ವಿದೇಶೀಯರಿಗೆ ಹಾಗೂ ನೈಜಕಲಾರಸಿಕರಿಗೆ ಅದು ರುಚಿಸದೇ ಹೋಯಿತು. ಅವರು ನವಿಲುಗಳನ್ನೇ ಹುಡುಕಿಕೊಂಡು ಬಂದು ಅವುಗಳ ಪರಂಪರೆಯ ರಹಸ್ಯಗಳನ್ನು ಅರಿಯತೊಡಗಿದರು. ಈ ಸಂದರ್ಭವನ್ನು ಬಳಸಿಕೊಂಡು ಹಾರುವ ಶಕ್ತಿಯುಳ್ಳ ನವಿಲುಗಳು ವಿದೇಶಗಳಿಗೆ ಹಾರಿ, ಗುಡಿಕಟ್ಟಿ, ಗರಿಗೆದರಿ ಜೀವಿಸತೊಡಗಿದವು. ಆಗ, ಇಂತಹ  ಪ್ರತಿಭಾ ಪಲಾಯನವನ್ನು ನಿಷೇಧಿಸಬೇಕು ಎಂದು  ಸುದ್ದಿಜೀವಿಗಳು ಬೊಬ್ಬಿಡತೊಡಗಿದರು.


ಇತ್ತ, ಹಾರುವ ಶಕ್ತಿಯಿಲ್ಲದೆ ಇಲ್ಲೇ ಉಳಿದ, ಖಾಸಗಿರಂಗದಲ್ಲೂ ಅವಕಾಶ ಸಿಗದ ನವಿಲುಗಳು ತಮ್ಮ ಪಿಂಛವನ್ನೇ ಕಸಪೊರಕೆಯಂತೆ ಬಳಸಲು ಕಲಿತವು. ಹೀಗೆ ತಮ್ಮತನ ಕಳೆದುಕೊಂಡು, ರೂಪಾಂತರಗೊಂಡು ಯಾವುದೇ ಕೆಲಸಕ್ಕೂ ಸೈ ಎಂದು ಜೀವಿಸಲು ಕಲಿತ ನವಿಲುಗಳು, ತಮ್ಮನ್ನೂ ಕೆಂಬೂತಗಳ ಪ್ರವರ್ಗಕ್ಕೇ ಸೇರಿಸಬೇಕೆಂದು ಮೃಗೀಯ ಸರ್ಕಾರವನ್ನು ಗೋಗರೆಯತೊಡಗಿದವು. ಇದನ್ನು ಕಂಡು ಇನ್ನಿತರ ಹಲವಾರು ಪ್ರಾಣಿ-ಪಕ್ಷಿಗಳೂ ತಂತಮ್ಮದೇ ಮಠಗಳನ್ನು ಕಟ್ಟಿಕೊಂಡು, ತಮ್ಮನ್ನೂ ಕೆಂಬೂತ ಪ್ರವರ್ಗಗಳಿಗೆ ಸೇರಿಸಬೇಕೆಂದು ಮೃಗೀಯ ಸರ್ಕಾರವನ್ನು ಒತ್ತಾಯಪಡಿಸತೊಡಗಿದವು.


ಕೊನೆಗೊಂದು ಪಸಂದಾದ ದಿನ, ಒನ್ ಫೈನ್ ಡೇ, ಆ ದೇಶದ ಸಮಸ್ತ ಪ್ರಾಣಿ-ಪಕ್ಷಿಗಳೂ ತಂತಮ್ಮ ವೈಶಿಷ್ಟ್ಯಗಳನ್ನು ಕಳೆದುಕೊಂಡು ಕೆಂಬೂತಗಳಾಗಿಹೋದವು !


ಆಗ, ಅಲ್ಲೆಲ್ಲೋ ಕುಂಭೀಪಾಕದಲ್ಲಿ ಶಾಶ್ವತವಾಗಿ ಠಿಕಾಣಿ ಹೂಡಿದ್ದ ಸಂವಿಧಾನ ಶಿಲ್ಪಿ ಕೆಂಬೂತವೊಂದು, ತಾನು ಸ್ವರ್ಗದಲ್ಲಿರುವಂತೆ ಸಂಭ್ರಮಿಸಿತು !


ನೀತಿ : ಹಾರುವ, ಶಕ್ತಿಯನ್ನು ಬೆಳೆಸಿಕೊಳ್ಳದಿದ್ದರೆ ಯಾರಿಗೂ ಉಳಿಗಾಲವಿಲ್ಲ.


*****
೨೪-೦೧-೨೦೧೨ - ಎಸ್ ಎನ್ ಸಿಂಹ, ಮೇಲುಕೋಟೆ.